ಜಿ.ಆರ್. ಗೋಲ್ಡ್ ಫಿಲಂಸ್ ಲಾಂಛನದಲ್ಲಿ ಜಿ. ರಾಮಚಂದ್ರನ್ ನಿರ್ಮಿಸುತ್ತಿರುವ, ಹೆಸರಾಂತ ನಿರ್ದೇಶಕ ವಿ. ಶೇಖರ್ ನಿರ್ದೇಶನದ ಹೆಂಡ್ತೀರ ದರ್ಬಾರ್ ಈ ವಾರ ಸೆನ್ಸಾರ್ ಮನೆಗೆ ಹೋಗಿದೆ. ಶೇಖರ್ ಅವರ ಹಲವಾರು ಚಿತ್ರಗಳು ಈಗಾಗಲೇ ಕನ್ನಡಕ್ಕೆ ರೀಮೇಕ್ ಆಗಿ ಯಶಸ್ವೀ ಪ್ರದರ್ಶನ ಕಂಡಿವೆ. ಈಗ ಶೇಖರ್ ಅವರೇ ನಿರ್ದೇಶಿಸಿದ್ದ ವರವು ಎತ್ತಣ ಸಲವು ಪತ್ತಣ ತಮಿಳು ಚಿತ್ರವನ್ನು ಪ್ರಥಮ ಬಾರಿಗೆ ಕನ್ನಡದಲ್ಲಿ ಅವರೇ ನಿರ್ದೇಶಿಸುತ್ತಿದ್ದಾರೆ. ಆ ಚಿತ್ರದಲ್ಲಿ ನಾಜರ್- ರಾಧಿಕಾ ಗೌಂಡುಮಣಿ, ವಡಿವೇಲು, ಅಭಿನಯಿಸಿದ ಪಾತ್ರಗಳನ್ನು ಇದರಲ್ಲಿ ರಮೇಶ್, ಮೀನಾ, ರಂಗಾಯಣರಘು, ಸಾಧುಕೋಕಿಲ ಮಾಡುತ್ತಿದ್ದಾರೆ.
ಮಧ್ಯಮ ವರ್ಗದ ಕುಟುಂಬಗಳಲ್ಲಿ ಸಾಮಾನ್ಯವಾಗಿ ನಡೆಯುವ ವಾದ-ವಿವಾದ ಕಲಹ ಮೊದಲಾದ ವಿಷಯಗಳನ್ನು ಇಲ್ಲಿ ಹಾಸ್ಯ ಮಿಶ್ರಿತವಾಗಿ ನಿರೂಪಿಸಿದ್ದಾರೆ ನಿರ್ದೇಶಕ ವಿ. ಶೇಖರ್. ಅವಶ್ಯಕತೆಗಿಂತ ಹೆಚ್ಚು ಖರ್ಚು ಮಾಡಿಕೊಂಡಾಗ ಉಂಟಾಗುವ ತೊಂದರೆಗಳೇ ಚಿತ್ರದ ಪ್ರಮುಖ ಕಥಾವಸ್ತು. ಮುಂದಿನ ತಿಂಗಳ ಮೊದಲನೇ ವಾರ ಚಿತ್ರ ರಾಜ್ಯಾದ್ಯಂತ ತೆರೆಕಾಣಲಿದೆ. ರಾಜು ಮಹೇಂದ್ರರ ಛಾಯಾಗ್ರಹಣ, ಸಾಧುಕೋಕಿಲರ ಸಂಗೀತ, ಎಸ್. ಮೋಹನ್ರ ಸಂಭಾಷಣೆ, ಜೋನಿ ಹರ್ಷಾರ ಸಂಕಲನ ಇದ್ದು, ಅಂಬಿಕಾಸೋನಿ, ಪ್ರೀತಿ, ಅಲ್ಲದೆ, ನಿರ್ಮಾಪಕ ಜಿ. ರಾಮಚಂದ್ರನ್ ಕೂಡ ಒಂದು ಪ್ರಮುಖ ಪಾತ್ರದಲ್ಲಿ ಅಭಿನಯಿಸಿದ್ದಾರೆ.